Sunday, 11 November 2018

ಅತಿಮಾನುಷ ಶಕ್ತಿಯಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ

1. ಯಾವಾಗಲಾದರೂ ಯಾವುದೇ ವಿದ್ಯಾಮಾನ ಸಂಭವಿಸಿದರೆ ಅದು ಹೇಗೆ ನಡೆಯಿತು, ಅದಕ್ಕೆ ಕಾರಣವೇನೆಂದು ತಿಳಿಯಲು ಮಾನವ ಜನಾಂಗ ಉತ್ಸುಕವಾಗಿರುತ್ತದೆ.
2. ಕೆಲವು ವೇಳೆ  ಕಾರಣಕ್ಕೂ ಪರಿಣಾಮಕ್ಕೂ ತೀರಾ ಸಾಮ್ಯತೆ ಮತ್ತು ನಿಕಟತೆ ಇರುವುದರಿಂದ ಆ ಘಟನೆ ನಡೆದುದನ್ನು ವಿವರಿಸಲು ಕಷ್ಟವಾಗುವಿದಿಲ್ಲ.
3. ಆದರೆ ಅನೇಕ ಸಲ ಕಾರಣದಿಂದ ಪರಿಣಾಮ ಬಹಳ ದೂರವಿರುವುದರಿಂದ ಪರಿಣಾಮವನ್ನು ವಿವರಿಸಲು ಆಗುವುದಿಲ್ಲ, ಸ್ಪಷ್ಟವಾಗಿ ಅಲ್ಲಿ ಕಾರಣವೇ ಗೋಚರಿಸುವುದಿಲ್ಲ.
4. ಆಗ ಪ್ರಶ್ನೆ ಏಳುತ್ತದೆ, ಹಾಗಾದರೆ ಹೇಗೆ ಇದು ನಡೆಯಿತು?
5. ಅಂಥ ಘಟನೆಗೆ ಏನೋ “ಅತಿಮಾನುಷ” ಶಕ್ತಿಯ ಕಾರಣವೆನ್ನುವುದು ಅತ್ಯಂತ ಸಾಧಾರಣವಾದ ಉತ್ತರ. ಅದನ್ನು ಸಾಮಾನ್ಯವಾಗಿ ಪವಾಡವೆನ್ನುತ್ತಾರೆ.
6. ಈ ಪ್ರಶ್ನೆಗೆ ಬುದ್ಧನಿಗಿಂತ ಹಿಂದಿನವರು ತೀರಾ ಭಿನ್ನ ಭಿನ್ನ ಉತ್ತರವನ್ನು ನೀಡಿದ್ದಾರೆ.
7. ಪ್ರತಿಯೊಂದು ಘಟನೆಗೂ ಕಾರಣವಿದೆ ಎನ್ನುವುದನ್ನು ಬುದ್ಧ ನಿರಾಕರಿಸಿದ. ಘಟನೆಗಳು ಸ್ವತಂತ್ರವಾಗಿ ಸಂಭವಿಸುತ್ತದೆಯೆಂದು ಆತ ಹೇಳಿದ.
8. ಘಟನೆಗೆ ಕಾರಣವಿರಲೇಬೇಕೆಂದು ಬುದ್ಧ ಒಪ್ಪಿದ್ದನು. ಆದರೆ ಕಾರಣವನ್ನು ಮಾನವ ಕರ್ತೃತ್ವದಲ್ಲಿ ಹುಡುಕಬಾರದು, ಅದನ್ನು ಪ್ರಕೃತಿಯಲ್ಲಿ, ನಿಯತಿಯಲ್ಲಿ, ವಸ್ತುಗಳ ಆಂತರಿಕ ನಿಯಮಗಳಲ್ಲಿ, ದೈವನಿರ್ಣಯದಲ್ಲಿ ಅಥವಾ ಅಂಥವುಗಳಲ್ಲಿ ಕಾಣಬೇಕಾಗುತ್ತದೆ ಎಂದು ಅವನು ಭೋಧಿಸಿದನು.
9. ಈ ಸಿದ್ದಾಂತಗಳನ್ನು ಬುದ್ಧ ಅಂಗೀಕರಿಸಲಿಲ್ಲ. ಪ್ರತಿಯೊಂದು ಘಟನೆಗೂ ಒಂದು ಕಾರಣವಿರುವುದಷ್ಟೇ ಅಲ್ಲ, ಈ ಕಾರಣ ಯಾವುದೇ ಮಾನವ ಕ್ರಿಯೆಯ ಅಥವಾ ನೈಸರ್ಗಿಕ ನಿಯಮದ ಫಲ ಎಂದು ಹೇಳಿದ.
10. ಒಂದು ಘಟನೆ ಸಂಭವಿಸಲು ಕಾಲ, ಪ್ರಕೃತಿ, ನಿಯತಿ ಇತ್ಯಾದಿ ಸಿದ್ದಾಂತಗಳು ಕಾರಣ ಎಂಬುದಕ್ಕೆ ವಿರುದ್ಧವಾದ ಆತನ ವಾದ ಈ ರೀತಿಯಾಗಿತ್ತು.
11. ಒಂದು ಘಟನೆ ಸಂಭವಿಸಲು ಕಾಲ, ಪ್ರಕೃತಿ, ನಿಯತಿ, ಇತ್ಯಾದಿಗಳು ಏಕೈಕ ಕಾರಣವಾದರೆ, ಆಗ ನಾವು ಯಾರು?
12. ಮನುಷ್ಯನಾದವನು ಕೇವಲ ಕಾಲ, ಪ್ರಕೃತಿ, ನಿಯತಿ, ಅದೃಷ್ಟ, ದೇವರುಗಳ ಕೈಗೊಂಬೆಯೇ?
13. ಮನುಷ್ಯ ಸ್ವತಂತ್ರನಾಗಿಲ್ಲ ಎಂದರೆ ಅವನ ಇರುವಿಕೆಯಿಂದ ಪ್ರಯೋಜನವೇನು? ಅತಿಮಾನುಷ ಕಾರಣಗಳನ್ನೆಲ್ಲಾ ಅವನು ನಂಬುತ್ತಾ ಹೋದರೆ ಅವನ ಬುದ್ದಿಶಕ್ತಿಯ ಪ್ರಯೋಜನಗಳೇನು?
14. ಮನುಷ್ಯ ಸ್ವತಂತ್ರನಾಗಿದ್ದರೆ ಆಗ ಎಲ್ಲಾ ಘಟನೆಗಳೂ ಅವನ ಕ್ರಿಯೆ ಅಥವಾ ಪ್ರಕೃತಿಯ ಕ್ರಿಯೆಯ ಫಲವಾಗಬೇಕಾಗುತ್ತದೆ. ಯಾವುದೇ ಘಟನೆಯೂ ತನ್ನ ಮೂಲದಲ್ಲಿ ಅತಿಮಾನುಷವಾಗಿರಲು ಸಾಧ್ಯವೇ ಇಲ್ಲ.
15. ಒಂದು ಘಟನೆಯ ಸಂಭವಕ್ಕೆ ಕಾರಣ ಕಂಡುಹಿಡಿಯಲು ಮನುಷ್ಯ ಸಮರ್ಥನಾಗದೇ ಇರಬಹುದು. ಆದರೆ ಅವನಿಗೆ ಬುದ್ದಿಶಕ್ತಿ ಇದ್ದರೆ ಅವನು ಒಂದಲ್ಲ ಒಂದು ದಿನ ಅದನ್ನು ಪತ್ತೆ ಹಚ್ಚಿಯೇ ಹಚ್ಚುತ್ತಾನೆ.
16. ಅತಿಮಾನುಷವಾದವನ್ನು ತಿರಸ್ಕರಿಸುವುದರಲ್ಲಿ ಬುದ್ಧನಿಗೆ ಮೂರು ಉದ್ದೇಶಗಳಿದ್ದವು.
17. ಮೊದಲನೇ ಉದ್ದೇಶ, ಮನುಷ್ಯನನ್ನು ವೈಚಾರಿಕ ಮಾರ್ಗದಲ್ಲಿ ನಡೆಸುವುದು.
18. ಎರಡನೇ ಉದ್ದೇಶ, ಸತ್ಯವನ್ನು ಅರಸಲು ಮನುಷ್ಯನನ್ನು ಸ್ವತಂತ್ರನನ್ನಾಗಿ ಮಾಡುವುದು.
19. ಮೂರನೇ ಉದ್ದೇಶ, ಅನ್ವೇಷಣಾ ಮನೋಭಾವವನ್ನು ಕೊಲ್ಲಲು ಕಾರಣವಾದ ಮೌಢ್ಯದ ಅತ್ಯಂತ ಮೂಲವನ್ನು ನಿರ್ಮೂಲ ಮಾಡುವುದು.
20. ಇದನ್ನೇ ಕಾರಣ ನಿಯಮವೆಂದು ಕರೆಯಲಾಗಿದೆ.
21. ಬುದ್ಧನ ಧಮ್ಮದಲ್ಲಿ ಕಾರಣ ಸಿದ್ದಾಂತವೇ ಅತ್ಯಂತ ಕೇಂದ್ರವಾದುದು. ಅದು ವಿಚಾರವನ್ನು ಭೋಧಿಸುತ್ತದೆ. ಬುದ್ಧ ಧಮ್ಮ ವಿಚಾರವಾದವಲ್ಲದಿದ್ದರೆ ಬೇರೇನೂ ಅಲ್ಲ.
22. ಆದ್ದರಿಂದಲೇ “ಅತಿಮಾನುಷ” ಶಕ್ತಿಯ ಆರಾಧನೆ ಧಮ್ಮವಲ್ಲ.

ಆಕರ- ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಗ್ರ ಬರಹಗಳು  ಮತ್ತು ಭಾಷಣಗಳು- ಸಂಪುಟ-10, ಭಾಗ-4. ಪು.ಸಂ-225,226.
☸(ಸಂಗ್ರಹ – ಭಾಸ್ಕರ್ ವಿಟ್ಲ)☸

ಅತಿಮಾನುಷ ಶಕ್ತಿಯಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ

1. ಯಾವಾಗಲಾದರೂ ಯಾವುದೇ ವಿದ್ಯಾಮಾನ ಸಂಭವಿಸಿದರೆ ಅದು ಹೇಗೆ ನಡೆಯಿತು, ಅದಕ್ಕೆ ಕಾರಣವೇನೆಂದು ತಿಳಿಯಲು ಮಾನವ ಜನಾಂಗ ಉತ್ಸುಕವಾಗಿರುತ್ತದೆ. 2. ಕೆಲವು ವೇಳೆ  ಕಾರಣಕ್...