ಬುದ್ಧ ಹಿಂಸಾಚಾರವನ್ನು ವಿರೋಧಿಸಿದ. ಆದರೆ ಅವನು ನ್ಯಾಯದ ಪರವಾಗಿಯೂ ಕೂಡ ಇದ್ದನು. ನ್ಯಾಯ ಸ್ಥಾಪಿಸಬೇಕಾದ ಕಡೆ ಅವನು ಬಲ ಪ್ರಯೋಗಕ್ಕೆ ಅನುಮತಿ ಇತ್ತನು. ಇದು ಅವನು ವೈಶಾಲಿಯ ಸೇನಾಧಿಪತಿ ಸಿಂಹ ಸೇನಾಪತಿಯ ಜೊತೆ ನಡೆಸಿದ ಸಂವಾದದಲ್ಲಿ ಸೊಗಸಾಗಿ ಬಂದಿದೆ. ಬುದ್ಧ ಅಹಿಂಸೆ ಬೋಧಿಸುವುದನ್ನು ತಿಳಿದ ಸಿಂಹ ಅವನ ಬಳಿ ಹೋಗಿ ಕೇಳಿದನು:
ಸಿಂಹ ಸೇನಾಪತಿ : “ಬುದ್ಧ ಅಹಿಂಸೆಯನ್ನು ಬೋಧಿಸುತ್ತಾರೆ. ಅಪರಾಧಿಗೆ ಶಿಕ್ಷೆ ಕೊಡಬಾರದೆಂದು ಬುದ್ಧ ಬೋಧಿಸುತ್ತಾರೆಯೇ? ನಮ್ಮ ಮಡದಿ ಮಕ್ಕಳನ್ನು ನಮ್ಮ ಆಸ್ತಿಪಾಸ್ತಿಯನ್ನು ರಕ್ಷಿಸಲು ಯುದ್ಧ ಮಾಡಬಾರದೆಂದು ಬುದ್ಧ ಬೋಧಿಸುತ್ತಾರೆಯೆ? ಅಹಿಂಸೆಯ ಹೆಸರಿನಲ್ಲಿ ನಾವು ಅಪರಾಧಿಗಳ ಕೈಯಲ್ಲಿ ಹಿಂಸೆ ಅನುಭವಿಸಬೇಕೇ?”
“ಸತ್ಯ ಮತ್ತು ನ್ಯಾಯಗಳ ಹಿತದೃಷ್ಟಿಯಿಂದಲೂ ಕೂಡ ಬುದ್ಧ ಎಲ್ಲ ಯುದ್ಧವನ್ನೂ ನಿಷೇಧಿಸುತ್ತಾರೆಯೆ?”
ಬುದ್ಧ : “ನಾನು ಬೋಧಿಸುತ್ತಿರುವುದನ್ನು ನೀನು ತಪ್ಪಾಗಿ ತಿಳಿದುಕೊಂಡಿರುವೆ. ಅಪರಾಧಿಯನ್ನು ಶಿಕ್ಷಿಸಲೇಬೇಕು. ನಿರಪರಾಧಿಯನ್ನು ಬಿಡುಗಡೆ ಮಾಡಲೇ ಬೇಕು. ಅಪರಾಧಿಯನ್ನು ನ್ಯಾಯಾಧೀಶ ಶಿಕ್ಷಿಸುವುದು ದೋಷವಲ್ಲ. ಅಪರಾಧಿಯ ತಪ್ಪಿನಿಂದ ಶಿಕ್ಷೆಯುಂಟಾಗುತ್ತದೆ. ಶಿಕ್ಷೆಯನ್ನು ವಿಧಿಸುವ ನ್ಯಾಯಾಧೀಶ ಕಾನೂನನ್ನು ಮಾತ್ರ ಜಾರಿ ಮಾಡುತ್ತಿರುತ್ತಾನೆ. ಹಿಂಸಾಚರಣೆಯಿಂದ ಅವನು ಕಲುಷಿತನಾಗುವುದಿಲ್ಲ. ನ್ಯಾಯ ಮತ್ತು ರಕ್ಷಣೆಗಾಗಿ ಹೋರಾಡುವ ಮನುಷ್ಯನನ್ನು ಹಿಂಸಾವಾದಿಯೆಂದು ದೂಷಿಸಲು ಸಾಧ್ಯವಿಲ್ಲ. ಶಾಂತಿ ರಕ್ಷಣೆಯ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ, ಯಾರು ಯುದ್ಧವನ್ನು ಪ್ರಾರಂಭಿಸಿದನೋ ಅವನ ಮೇಲೆ ಹಿಂಸೆಯ ಜವಾಬ್ದಾರಿ ಬೀಳುತ್ತದೆ. ಮನುಷ್ಯ ಎಂದೂ ದುಷ್ಟ ಶಕ್ತಿಗಳಿಗೆ ಶರಣಾಗತಬಾರದು. ಯುದ್ಧವಾಗಬಹುದು. ಆದರೆ ಅದು ಸ್ವಾರ್ಥ ಸಾಧನೆಯಾಗಿ ಆಗಬಾರದು….”
- ಬಾಬಾ ಸಾಹೇಬ್ ಅಂಬೇಡ್ಕರ್
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಭಾಷಣಗಳು, ಸಂಪುಟ – 3, ಭಾಗ – ನಾಲ್ಕು, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್, ಪುಟ.473
No comments:
Post a Comment